ಇತ್ತೀಚೆಗೆ ಅಟ್ಲಾಂಟದಲ್ಲಿ ನಡೆದ ೭ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಅಟ್ಲಾಂಟ ಕನ್ನಡ ಮನಸುಗಳಿಗೆ ಕನ್ನಡದ ಕಂಪು ಪಸರಿಸಿತು. ಕರ್ನಾಟಕದಲ್ಲಿದ್ದೂ ನೋಡಲಾಗದಿದ್ದ ಅನೇಕ ಕನ್ನಡದ ಮೇರು ವ್ಯಕ್ತಿಗಳನ್ನ ಅಮೆರಿಕಾದಲ್ಲಿ ಮುಖತಃ ಕಂಡು ಕಣ್ತುಂಬಿಕೊಂಡಿದ್ದು ನಿಜಕ್ಕೂ ಮರೆಲಾಗದ ಅನುಭವ.
ಕರ್ನಾಟಕದಲ್ಲೇ ಕನ್ನಡ ಕಾಳಜಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹೊರನಾಡುಗಳಲ್ಲಿ ಕನ್ನಡದ ಹಣತೆ ಬೆಳಗುವ ಇಂತಹ ಸಮ್ಮೇಳನಗಳು ತೀರಾ ಅಗತ್ಯ. ಸಮ್ಮೇಳನದ ಸಂಘಟಕರಿಗೂ,ಅತಿಥಿಗಳಿಗೂ,ಪ್ರಾಯೋಜಕರಿಗೂ ಹೃತ್ಪೂರ್ವಕ ಧನ್ಯವಾದಗಳು.
ಮುಖ್ಯಮಂತ್ರಿ ಚಂದ್ರುರವರ ಹಸನ್ಮುಖತೆ, ಸುಧಾ ಮೂರ್ತಿ ಅವರ ಸರಳತೆ, ಕಂಬಾರರ ಕನ್ನಡ ಕಾಳಜಿ, ಟಿ ಎನ್ ಸೀತಾರಾಮ್ ಅವರ ಮುಕ್ತ ಮಾತುಕತೆ, ಡುಂಡಿರಾಜರ ನವಿರು ಹಾಸ್ಯ, ಪದ್ಮರಾಜ ದಂಡಾವತಿ ಅವರ ಮಾಧ್ಯಮ ಪಾಂಡಿತ್ಯ, ಅರ್ಚನ ಉಡುಪ ಅವರ ಸುಮಧುರ ಗಾನಸಿರಿ, ಮೈಸೂರು ಆನಂದ್ ಮತ್ತು ಶರತ್ ಲೋಹಿತಾಶ್ವ ಅವರ ಮನರಂಜನೆ ಎಲ್ಲವು ಸೇರಿ ಮನಸ್ಸು ತುಂಬಿ ಬಂದಿತ್ತು.