ಶನಿವಾರ, ಸೆಪ್ಟೆಂಬರ್ 18, 2010

ಗೂಗಲ್ ನ ಥಟ್ಟನೆ ಹುಡುಕು...

ಗೂಗಲ್.... 'ಹುಡುಕು' ಎಂಬ ಪದಕ್ಕೆ ಸಮಾನಾರ್ಥಕವಾಗುವಷ್ಟು ಪ್ರಭಾವಶಾಲಿಯಾಗಿ ಬೆಳೆದು ನಿಂತ ಜಾಲತಾಣ.  ಬರೆಯಲು ಒಂದು ಸಣ್ಣ  ಜಾಗ ಮತ್ತು ಒಂದು ಹುಡುಕುಗುಂಡಿ ಮಾತ್ರ ಇಟ್ಟುಕೊಂಡು ಅಂತರ್ಜಾಲದಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ತೋರಿಸುತ್ತಿರುವ ಸಂಸ್ಥೆ...ಇದರ ಮತ್ತೊಂದು ಹೊಸ ಆವಿಷ್ಕಾರ 'ಥಟ್ಟನೆ ಹುಡುಕು' (Google Instant ).
ಹುಡುಕಬೇಕಾದ ಪದವನ್ನು ಟೈಪಿಸಲು ಶುರು ಮಾಡುತ್ತಿದ್ದಂತೆಯೇ ಫಲಿತಾಂಶಗಳನ್ನು ತೋರಿಸಲಾರಭಿಸುತ್ತದೆ. ಹುಡುಕಬೇಕಾದ ಪದ ಅಥವಾ ವಾಕ್ಯವನ್ನು ಪೂರ್ತಿಯಾಗಿ ಟೈಪ್  ಮಾಡುವ ಅಗತ್ಯವೇ ಇಲ್ಲ ಮತ್ತು  ಹುಡುಕುಗುಂಡಿಯನ್ನು ಒತ್ತುವ ಶ್ರಮವೇ ಬೇಕಿಲ್ಲ. ಜೊತೆಗೆ ನಾವು ಹುಡುಕಬೇಕಾಗಿರುವ ಪದ/ವಾಕ್ಯವನ್ನು ಕೆಲವು ಅಕ್ಷರಗಳನ್ನು ಬರೆದ ಕೂಡಲೇ ಊಹಿಸಿ ಅದಕ್ಕೆ ಸರಿಹೊಂದುವ ಫಲಿತಾಂಶಗಳನ್ನು ತೋರಿಸುತ್ತದೆ.
ಸಾಮಾನ್ಯವಾಗಿ ನಾವು ಹುಡುಕಬೇಕಾಗಿರುವುದನ್ನು ಬರೆಯಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ ಆದರೆ ಗೂಗಲ್ ಫಲಿತಾಂಶ ಒದಗಿಸಲು ಅಷ್ಟು ಸಮಯ ತೆಗೆದುಕೊಳ್ಳುವುದಿಲ್ಲ, ಈ ಅಂಶವೇ  ' ಥಟ್ಟನೆ ಹುಡುಕು'  ಆವಿಷ್ಕಾರಕ್ಕೆ ಕಾರಣ. ಈ ಹೊಸ ವಿಧಾನದ ಮೂಲಕ ಬರೆಯಲು ಮತ್ತು ಹುಡುಕುಗುಂಡಿಯನ್ನು ಒತ್ತಲು ತೆಗೆದುಕೊಳ್ಳುವ ಸಮಯನ್ನು ಉಳಿಸಬಹುದು. ಗೂಗಲ್ ನ ಅಂದಾಜಿನ ಪ್ರಕಾರ ಈ ಹೊಸ ವಿಧಾನ ಪ್ರತೀ ಸೆಕಂಡ್ ಜಗತ್ತಿನ 11 ಮಾನವ ಗಂಟೆಗಳಷ್ಟು ಸಮಯವನ್ನು ಉಳಿಸುತ್ತದೆ ಎಂಬುದು!. ಗೂಗಲ್ ಪ್ರತಿದಿನ 1 ಬಿಲಿಯನ್ (10 ಕೋಟಿ) ಹುಡುಕಾಟಗಳನ್ನು ನಡೆಸುತ್ತದೆ, ಥಟ್ಟನೆ ಹುಡುಕು' ವಿಧಾನದ ಮೂಲಕ ಗೂಗಲ್ ಇಂದಿನ ಸಾಮರ್ಥ್ಯದ 20 ಪಟ್ಟು ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಬೇಕಿದೆ.
ಬರೆದು ಮುಗಿಸುವ ಮೊದಲೇ ಫಲಿತಾಂಶ ಬಂದರೆ, ಗಮನ ಅತ್ತ ಸರಿದು ಹುಡುಕಬೇಕಾಗಿರು ವಿಷಯ ಬಿಟ್ಟು ಬೇರೆಕಡೆ ಗಮನ ಹರಿಸುವಂತೆ ಮಾಡುತ್ತದೆ ಮತ್ತು ನಿಧಾನಗತಿಯ ಸಂಪರ್ಕಗಳಿಗೆ ಹೆಚ್ಚು ಉಪಯುಕ್ತವಾಗಲಾರದು ಎಂಬ ಮಾತುಗಳು ಕೇಳಿಬರುತ್ತಿದ್ದರು ಇದೊಂದು ಅದ್ಭುತ ಆವಿಷ್ಕಾರವೇ ಸರಿ!

ಸೋಮವಾರ, ಸೆಪ್ಟೆಂಬರ್ 6, 2010

ವೋಯಜರ್-1 ವ್ಯೋಮ ನೌಕೆ ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ ತೆಗೆದ ಭೂಮಿಯ ಚಿತ್ರ

ಇದೆ ನೋಡಿ ನಮ್ಮ ಭೂಮಿ .... ವೋಯಜರ್-1 ವ್ಯೋಮ ನೌಕೆಯಿಂದ ತೆಗೆದ ಚಿತ್ರ (ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ... ಸೌರಮಂಡಲದ ಕೊನೆಯ ಅಂಚಿನಿಂದ ಸೂರ್ಯ ಕಿರಣಗಳ ನಡುವೆ ಕಾಣುತ್ಥಿರುವ ಸೂಕ್ಷ್ಮ ತೆಳು ನೀಲಿ ಚುಕ್ಕೆಯನ್ನೊಮ್ಮೆ ನೋಡಿ... ಅದೇ ನಾವು... ನಮ್ಮ ಭೂಮಿ.... ನಮ್ಮೆಲ್ಲರ ಮನೆ.... ನಾವೆಲ್ಲರಿರುವುದು ಆ ಚುಕ್ಕಿಯ ಮೇಲೆ... ನೀವು ಇಷ್ಟಪಟ್ಟವರು ..ನಿಮಗೆ ತಿಳಿದಿರುವವರು...ನೀವು ಕೇಳಿರುವವರು.. ಎಲ್ಲರೂ ಬಾಳಿ ಬದುಕಿದ ಜಾಗ ... ಇತಿಹಾಸದಲ್ಲಿನ ಎಲ್ಲಾ ಸುಖ ದುಃಖ ನೋವು ನಲಿವುಗಳು.. ಸಾವಿರಾರು ತತ್ತ್ವ ಚಿಂತನೆಗಳು, ಜಾತಿ ಧರ್ಮಗಳು ,ಆರ್ಥಿಕ ನೀತಿ ಗಳು.. ಎಲ್ಲಾ ನಾಯಕರು... ಹೇಡಿಗಳು... ಪ್ರತಿಯೊಂದು ನಾಗರಿಕತೆಯ ನಿರ್ಮಾತೃಗಳು ಕೆಡುಕರು .. ಎಲ್ಲಾ ಚಕ್ರವರ್ತಿಗಳು ... ಗುಲಾಮರು ... ರೈತರು .. ಅಮರ ಪ್ರೇಮಿಗಳು.. ಆಶಾದಾಯಕ ಮಕ್ಕಳು.. ತಾಯಿ ತಂದೆಯರು.. ಪ್ರತಿಯೊಬ್ಬ ಸಂಶೋದಕ ಅನ್ವೇಷಕರು .. ನೀತಿ ಭೋದಕರು ... ಪ್ರತಿಯೊಬ್ಬ ಭ್ರಷ್ಟ ರಾಜಕಾರಣಿಗಳು ... ನಟರು ... ಮಹಾನ್ ನಾಯಕರು .. ಮಹಾನ್ ಪಾಪಿಗಳು .. ಸಂತರು ಬಾಳಿ ಬದುಕಿದ ಜಾಗ ...

ನಮ್ಮ ಭೂಮಿ ಬೃಹತ್ ಬ್ರಮ್ಮಾಂಡದ ಅತಿ ಸಣ್ಣ ಕಣ... ಈ ಸಣ್ಣ ಚುಕ್ಕಿಯ ಯಾವುದೋ ಮೂಲೆಯಲ್ಲಿನ ಕ್ಷಣಕಾಲದ ಒಡೆತನಕಾಗಿ ರಕ್ತದ ಕೋಡಿ ಹರಿಸಿದ ... ಸಾಮ್ರಾಜ್ಯ ಶಾಹಿ ಚಕ್ರವರ್ತಿಗಳು .. ಸೇನಾಧಿಪತಿಗಳು... ರಾಷ್ಟ್ರನಾಯಕರು ... ಪ್ರಧಾನಿಗಳ ಬಗ್ಗೆ ಒಮ್ಮೆ ಯೋಚಿಸಿ... ಈ ಚಿಕ್ಕಿಯ ಒಂದು ಭಾಗದ ಜನರು ಗುರುತಿಸಲೆ ಆಗದ ಚುಕ್ಕಿಯ ಮತ್ತೊಂದು ಭಾಗದ ಜನರ ಮೇಲೆ ನಡೆಸಿದ ಕೊನೆಇಲ್ಲದ ಕ್ರ್ರೋರ ಕೃತ್ಯಗಳು .. ಅದೆಷ್ಟು ನಿರಂತರ ಅಪನಂಬಿಕೆಗಳು ... ಒಬ್ಬರನ್ನೊಬ್ಬರು ಕೊಲ್ಲಲು ಅದೆಷ್ಟು ತವಕ ದ್ವೇಷ ...
ನಮ್ಮ ನಿಲುವುಗಳನ್ನು ... ನಾವು ಕಲ್ಪಿಸಿಕೊಂಡಿದ್ದ ಸ್ವಪ್ರತಿಷ್ಠೆಯನ್ನು ... ಬ್ರಹ್ಮಾಂಡದಲ್ಲೊಂದು ವಿಶೇಷವಾದ ಸ್ಥಾನ ನಮಗಿದೆ ಎಂದುಕೊಂಡಿದ್ದ ಮರಳುತನವನ್ನ ಪ್ರಶ್ನಿಸುವಂತಿದೆ ಮಸುಕಾದ ಕಿರಣದೊಳಗಿನ ಈ ಬಿಂದು ...

ನಮ್ಮ ಗ್ರಹ ಬೃಹತ್ ಬ್ರಹ್ಮಾಂಡದ ಅಂಧಕಾರದಲ್ಲಿ ಆವರಿಸಲ್ಪಟ್ಟಿರುವ ಅತಿ ಸೂಕ್ಸ್ಮ ಚೂರು ... ಈ ನಮ್ಮ ಸಂದಿಗ್ಧವಾದ ಸ್ಥಿತಿ .. ಹೊರಗಿನ ವಿಸ್ತಾರ ಜಗತ್ತು ನೋಡಿದರೆ ... ನಮ್ಮನ್ನು ನಮ್ಮವರಿಂದ ಉಳಿಸಲು ಯಾರಾದರೂ ಬರುತಾರೆಯೇ ಎಂಬ ಸುಳಿವು ಕೂಡ ಇಲ್ಲ...
-ಕಾರ್ಲ್ ಸಗನ್
(ಕಾರ್ಲ್ ಸಗನ್ ಅವರ ಬರಹದ ಕನ್ನಡಾನುವಾದ - ಚಂದ್ರು )

ಭಾನುವಾರ, ಸೆಪ್ಟೆಂಬರ್ 5, 2010

ಅಮೆರಿಕ ಲೈಫು ಇಷ್ಟೇನೆ ...!

ತಿಂಗಳ ಕೊನೆಯ ಡಾಲರಿಗಾಗಿ
ವಾರ ಪೂರ್ತಿ ಯಾರಿಗೋ ದುಡಿದು
ವೀಕೆಂಡ್ ಶಾಪಿಂಗ್ ವಾಶಿಂಗ್ ಮಾಡಿ
ಪಾರ್ಟಿ ಕ್ಲಬ್ಬಿನ ಲೋಕವ ಸೇರು
ಲೈಫು ಇಷ್ಟೇನೆ ...!

ವಾಲ್ಮಾರ್ಟ್ ಟಾರ್ಗೆಟ್ ಬೆಷ್ಟ್ ಬೈ ಸುತ್ತು
ಡಾಲರ್ ಜೊತೆಗೆ ರೂಪಾಯಿ ಗುಣಿಸು
ಆರ್ಕುಟ್ ಫೇಸ್ಬುಕ್ ಸ್ಕೈಪನೆ ಜಪಿಸಿ
ಲ್ಯಾಪ್-ಟಾಪ್ ಅಲ್ಲೇ ಜೀವನ ಮುಗಿಸು
ಲೈಫು ಇಷ್ಟೇನೆ ...!

ಮಸಾಲೆ ಊಟವ ಮನದಲೆ ನೆನೆದು
ಬರ್ಗರ್ ಚೀಸು ಕಣ್ಣ್ಮುಚ್ಚಿ ತಿಂದು
ನೀರಿನ ಬದಲು ಕೂಕನೆ ಕುಡಿದು
ಬೊಜ್ಜು ತುಂಬಿದ ಹೊಟ್ಟೆಯ ನೋಡು
ಲೈಫು ಇಷ್ಟೇನೆ ...!

ರೋಡು ಕಾರು ಆರಾಮು ನೋಡಿ
ನಮ್ ದೇಶಾನ ಉದ್ದಕ್ಕೂ ತೆಗಳು
ಟ್ರಾಫಿಕ್ ಅಲ್ಲಿ ಟಿಕೇಟು ಸಿಕ್ರೆ
ನಮ್ಮೊರ್ ಮಾಮನೆ ಸರಿ ಅಂತ ಹೊಗಳು
ಲೈಫು ಇಷ್ಟೇನೆ ...!

ಲಾಂಗ್ ವೀಕೆಂಡ್ಗೆ ಲಾಂಗ್ ಲಾಂಗ್ ಪ್ಲಾನು
ಮೂರ್ ದಿನದಲ್ಲಿ ಆರೂರ್ ಸುತ್ತು
ನಮ್ ದೇಶಾನೇ ಸರಿಯಾಗಿ ನೋಡ್ದೆ
ಅಮೆರಿಕ ಮಾತ್ರ ಪೂರ್ತಿ ನೋಡ್ಕೋ
ಲೈಫು ಇಷ್ಟೇನೆ...!

ಫೋನು ಕ್ಯಾಮೆರಾ ಡೀಲ್ಅಲ್ಲಿ ಮುಳುಗು
ಬೇಕೋ ಬೇಡವೋ ಎಲ್ಲಾನು ಕೊಂಡ್ಕೋ
ಹಾಗು ಹೀಗೂ ಇಂಡಿಯಾಗೆ ಸೇರ್ಸು
ಎಲ್ಲಾರ್ಗೂ ಹಂಚಿ ದೊಡ್ಡತನ ತೋರ್ಸು
ಲೈಫು ಇಷ್ಟೇನೆ ...!

-ಚಂದ್ರು

ಶನಿವಾರ, ಜೂನ್ 26, 2010

ಫೇಸ್ ಬುಕ್ ಕನ್ನಡ ಗೊಳಿಸಲು ಸಹಕರಿಸಿ....

ನಮಸ್ಕಾರ,
ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು... ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.


ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ 'ಫೇಸ್ ಬುಕ್' ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ 'ಸಂಪೂರ್ಣ ಕನ್ನಡಮಯ ಫೇಸ್ ಬುಕ್'' ರೆಡಿ.

'ಫೇಸ್ ಬುಕ್'' ಪ್ರಚಾರ ಮಾಡುವುದಕ್ಕಾಗಲಿ ಅಥವಾ ಅದರಿಂದ ಕನ್ನಡಿಗರಿಗೆ ಉಪಯೋಗವಿದೆ ಅಥವಾ ಇನ್ನಾವುದೇ ಉದ್ದೇಶದಿಂದ ಇದನ್ನು ಬರೆದಿದ್ದಲ್ಲ. ಇದರ ಹಿಂದಿನ ಕಳಕಳಿ ಇಷ್ಟೇ ...

ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಾಡ್ಯವಾದ ಜಾಗತಿಕ ಜಾಲತಾಣಗಳು ತಮ್ಮ ಸೇವೆಗಳನ್ನು ಸಾದ್ಯವಾದಷ್ಟು ಭಾಷೆಗಳಲ್ಲಿ ನೀಡಿ ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಕ್ಕೆ ಆ ಸಂಸ್ಥೆಗಳು ಪರಿಗಣಿಸುವುದು  'ಎಷ್ಟು ಮಂದಿ ಆ ಭಾಷೆಯನ್ನು ಅಂತರ್ಜಾಲದಲ್ಲಿ ಬಳಸಬಹುದು' ಎಂಬ ಅಂಶ. ಈ ಕೆಲಸದಲ್ಲಿ ನಾವು ಹಿಂದೆ ಬಿದ್ದರೆ ನಮ್ಮ ಅಕ್ಕ ಪಕ್ಕದ ಭಾಷೆಗಳು ಅಂತರ್ಜಾಲದಲ್ಲಿ ನಮ್ಮ ಕನ್ನಡಕ್ಕಿಂತ ಮೇಲುಗೈ ಸಾಧಿಸುತ್ತವೆ(ಸಾಧಿಸಿವೆ). ಹೀಗಾದಲ್ಲಿ ಜಾಗತಿಕವಾಗಿ ಬಲಾಡ್ಯವಾದ ಸಂಸ್ಥೆಗಳು ಸಹಜವಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸುವುದರ ಬಗ್ಗೆ ನಿರ್ಲಕ್ಷ ತಾಳುತ್ತವೆ (ನಿರ್ಲಕ್ಷಿಸಿವೆ). ಏಕೆಂದರೆ ಎಲ್ಲ ಅಂತರ್ಜಾಲ ಅಭಿವೃದ್ಧಿ ಕೆಲಸಗಳು 'ಎಷ್ಟು ಜನ ಬಳಸುತ್ತಾರೆ/ಬಳಸುತ್ತಿದ್ದಾರೆ ' ಎಂಬ ಅಂಕಿ ಅಂಶದ ಮೇಲೆ ನಿಂತಿವೆ. ಯಾವ ಭಾಷೆ ಅಂತರ್ಜಾಲದಲ್ಲಿ ಹೆಚ್ಚು ಉಪಯೋಗಿಸಲ್ಪಡುತ್ತದೋ ಆ ಭಾಷೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಇಲ್ಲವಾದಲ್ಲಿ, ಅಂತಹ ಯಾವುದೇ ಜಾಗತಿಕ ಜಾಲತಾಣಗಳು ಅದರ ಅಭಿವೃದ್ದಿಗೆ ಗಮನ ನೀಡದೆ ಅಂತರ್ಜಾಲದಲ್ಲಿ ನಶಿಸಿ ಹೋಗಬಹುದು. ಇದಕ್ಕೆ ಕೆಲವು ಉದಾಹರಣೆಗಳು

೧-ಗೂಗಲ್ ನ್ಯೂಸ್ , ದಕ್ಷಿಣ ಭಾರತದ ಎಲ್ಲ ಭಾಷೆ ಗಳಲ್ಲಿ ಲಬ್ಯವಿದೆ ಕನ್ನಡದಲ್ಲಿ ಇಲ್ಲ ... ಕಾರಣ - ಕನ್ನಡ ವಾರ್ತೆ ಅನ್ನು ಅಂತರ್ಜಾಲದಲ್ಲಿ ಓದುವವರು ಕಡಿಮೆ.

೨- 'ಫೇಸ್ ಬುಕ್ ' - ದಕ್ಷಿಣ ಭಾರತದ ಎಲ್ಲ ಭಾಷೆ ಗಳಳಲ್ಲಿ ಸಂಪೂರ್ಣ ಅನುವಾದಗೊಂಡಿದೆ ಹಾಗು ಉಪಯೋಗಕ್ಕೆ ಲಬ್ಯವಿದೆ. ಕನ್ನಡ ಕೇವಲ ೩೦% ಮಾತ್ರ ಅನುವಾದಗೊಂಡಿದೆ - ಕಾರಣ ಕನ್ನಡ ಫೇಸ್-ಬುಕ್ ಅನುವಾದಕರು ಮತ್ತು ಅಭಿಮತ ನೀಡಿರುವವರು ಕಡಿಮೆ.

೩- ದಕ್ಷಿಣ ಭಾರತದ ಪ್ರತಿಯೊಂದು ಭಾಷೆಯೂ ಸಾವಿರಾರು ಜಾಲತಾಣಗಳು/ಬ್ಲಾಗ್ /ಸಿನಿಮಾ/ಟೀವಿ/ವಾರ್ತೆ/ವ್ಯಾಪಾರ/ವಿದೇಶಿಸಂಘ ಗಳ ಜಾಲತಾಣಗಳನ್ನು ಗಳನ್ನೂ ಹೊಂದಿವೆ ಅವುಗಳಿಗೆ ಸಂಖ್ಯೆಗೆ ಹೋಲಿಸಿದರೆ ಕನ್ನಡ ಜಾಲತಾಣಗಳ ಸಂಖ್ಯೆ ಭಯ ಹುಟ್ಟಿಸುವಷ್ಟು ಕಡಿಮೆ. ಕಾರಣ ಅಂತರ್ಜಾಲದಲ್ಲಿ ಕನ್ನಡ ಬಳಸುವವರ ಸಂಖ್ಯೆ ಕಡಿಮೆ.

ಹೀಗೆ ಹೇಳುತ್ತಾ ಹೋದರೆ ಹಲವಾರು . ಆದ್ದರಿಂದ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ' ಇದು ಸೂಕ್ತ ಕಾಲ.

ಸದ್ಯಕ್ಕೆ ಫೇಸ್ ಬುಕ್ ಕನ್ನಡ ಗೊಳಿಸುವುದರ ಮೂಲಕ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಯನ್ನು' ಪ್ರಾರಂಬಿಸೋಣ.

ಫೇಸ್ ಬುಕ್ ಪದಗಳ ಅನುವಾದ ಮಾಡಲು ಅಥವಾ ಅಬಿಮತ ನೀಡಲು ...

*ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ. (ಖಾತೆ ಇಲ್ಲದಿದ್ದರೆ , ಹೊಸ ಖಾತೆ ತೆಗೆಯುವುದು ೧ ನಿಮಿಷದ ಕೆಲಸ)
*ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/home.php?#!/translations/?ref=ts
ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ - (ಕೊನೆ ಇಂದ ಎರಡನೇ ಆಯ್ಕೆ)
*ಅನುವಾದ ಶುರುಮಾಡಿ ( ಕನ್ನಡ ದಲ್ಲಿ ಬರೆಯಲು ಈ ಕೊಂಡಿ ಬಳಸಬಹುದು - http://www.google.com/transliterate/ )
*ಅನುವಾದದಲ್ಲಿ ಆಸಕ್ತಿ ಇಲ್ಲದಿದ್ದರೆ - ಈಗಾಗಲೇ ಅನುವಾದಗೊಂಡಿರುವ ಪದಗಳಿಗೆ ನಿಮ್ಮ ಅಭಿಮತ (ಸರಿ/ತಪ್ಪು) ತಿಳಿಸಿ (vote up or vote down) ಮಾಡಬಹುದು.

ಹೆಚ್ಹಿನ ವಿವರಗಳು ಬೇಕಿದ್ದರೆ ಮತ್ತು ಕನ್ನಡ ಅನುವಾದದಲ್ಲಿ ಆಸಕ್ತಿ ಇದ್ದರೆ ತಿಳಿಸಿ... ಹಲವಾರು ಜಾಲತಾಣಗಳು ಹವ್ಯಾಸಿ ಕನ್ನಡ ಅನುವಾದಕರಿಗಾಗಿ ಕಾಯುತ್ತಿದೆ. ನಿಮ್ಮ ಹವ್ಯಾಸ ಮತ್ತು ದಿನದ ಒಂದೆರಡು ನಿಮಿಷಗಳು ಕನ್ನಡವನ್ನು ಅಂತರ್ಜಾಲದಲ್ಲಿ ಬೆಳಗಲು ಸಹಕಾರಿಯಾಗಬಹುದು.. ನಿಮ್ಮ ಪ್ರತಿಯೊಂದು ಕನ್ನಡ ಕ್ಲಿಕ್ 'ಅಂತರ್ಜಾಲದಲ್ಲಿ ಕನ್ನಡ ಕ್ರಾಂತಿಗೆ' ಅಳಿಲುಸೇವೆ ಯಾಗಬಹುದು....

ಕನ್ನಡಕ್ಕಾಗಿ ನಿಸ್ವಾರ್ಥ ಮತ್ತು ತೆರೆಮರೆಯ ಸೇವೆಯಲ್ಲಿ ತೊಡಗಿರುವವರ ಕೆಲವು ಕೊಂಡಿಗಳು ...
http://www.banavasibalaga.org/
http://enguru.blogspot.com/
http://karnatique.blogspot.com/
http://sampada.net/
http://www.kendasampige.com/
http://kn.wikipedia.org/

ಇನ್ನು ಹೆಚ್ಚಿನ ಆಸಕ್ತಿ ಇದ್ದರೆ ತಿಳಿಸಿ, ಇಂಥಹ ನೂರಾರು ವಿಷಯಗಳ ಬಗ್ಗೆ ಪ್ರತಿದಿನ ಕೆಲಸಮಾಡುತ್ತಿರುವ banavasi_it_kannadigaru@googlegroups.com ಸೇರಿ

ಮಂಗಳವಾರ, ಜೂನ್ 22, 2010

ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು

ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ
ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ

ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು!

ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು

ಅರ್ಥೇಚಾ - ಹಣ ಕೊಟ್ಟು ಕೊಂಡ ಚಹಾ

ಅನುಭವ - ಹಳೆಯ ತಪ್ಪಿಗೆ ಜಾಣರು ಕೊಡುವ ಹೊಸ ಹೆಸರು

ಅಮರ ಕೃತಿ - ಮಾರಾಟವಾಗದ ಗೃಂಥ

ಅರಸ - ರಸಿಕನಲ್ಲದವನೇ ಅರಸ!

ಋಷಿ - ರೋಷ ಉಳ್ಳವನೇ ಋಷಿ!

ಭಾವಜೀವಿ - ಭಾವನ ಮನೆಯಲ್ಲಿ ವಾಸವಾಗಿರುವವನೇ ಭಾವ ಜೀವಿ

ಸೋಮವಾರ, ಮೇ 3, 2010

ಒಂದೆರೆಡು ಸಾಲಿನ ಕತೆಗಳು.


——————————————————–
ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ.
——————————————————–
ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾಯಿಗಳನ್ನ ತುಂಬುತ್ತಿದ್ದಾಳೆ ಅದರೂ ತುಂಬುತ್ತಿಲ್ಲ..ಮಗ ಎಮ್ ಎನ್ ಸಿ ಕಂಪನಿಯ ನೌಕರನಂತೆ.
——————————————————–
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.
——————————————————–
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
——————————————————–
ಒಂದು ಕತೆಯ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲವಂತೆ. ನ್ಯಾಯಕ್ಕಾಗಿ ಕಾದಂಬರಿಕಾರನ ಹತ್ತಿರ ಧರಣಿ ಕೂತಿದೆ. ಕಾದಂಬರಿಕಾರ ತನ್ನ ತಾನು ಸಂತೈಸಿಕೊಳ್ಳುತ್ತಿದ್ದಾನೆ.
———————————————————
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು
ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
———————————————————
ಅವಳ ಗೆಜ್ಜೆ ಸದ್ಧು ಮದುವೆಯ ಮೊದಲು ಹೇಗೆ ಕೇಳಿಸುತ್ತಿತೋ ಈಗ ಹಾಗೆಲ್ಲ ಕೇಳಿಸುತ್ತಿಲ್ಲವಂತೆ.
ಗೆಜ್ಜೆ ತೆಗೆದಿಟ್ಟು ಮನೆಯಲ್ಲಿ ಒಡಾಡಬಾರದ ಅಂದು ಸಿಡುಕುತ್ತಿದ್ದಾನೆ.
———————————————————
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
———————————————————-
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
———————————————————–
ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು
ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು

(Source - An email)


ಶನಿವಾರ, ಫೆಬ್ರವರಿ 27, 2010

ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಮೈಸೂರು ಮಮತೆಯ ಮರೆಯದಿರು
ಮದ್ರಾಸು ಬಿಸಿಲ ನೆನೆಯದಿರು

ತೆರೆದಿಡು ನೆನಪುಗಳ ಕಂತೆ
ಕಟ್ಟದಿರು ಚಿಂತೆಗಳ ಸಂತೆ
ಸದಾ ನಗುತಿರು ಎಲ್ಲರಂತೆ
ನಿನ್ನತನಕ್ಕೆ ಕುಂದುಬರದಂತೆ

ದ್ವಂದ್ವಗಳಿಗಿರಲಿ ಪೂರ್ಣ ವಿರಾಮ
ನೋವುಗಳಿಗಿರಲಿ ಅರ್ಧ ವಿರಾಮ
ಭಾವನೆಗಳಿಗಿರಲಿ ಅಲ್ಪ ವಿರಾಮ
ಸಂತೋಷಕ್ಕಿರದಿರಲಿ ವಿರಾಮ

ಸದಾ ನಗುತ್ತಿರು
ಸದಾ ನಲಿಯುತ್ತಿರು
ಅಗಾಗ ನೆನೆಯುತ್ತಿರು
ನೆನೆದಾಗ ಬರೆಯುತ್ತಿರು!